ಕೆಳದಿ ರಾಣಿ ಚೆನ್ನಮ್ಮ(1647-1697)
ಕೆಳದಿ ರಾಣಿ ಚೆನ್ನಮ್ಮ(1647-1697)
ಆಕೆ ಕನ್ನಡದ ಹೆಣ್ಣುಹುಲಿ.
ಆಕೆ ಎಂದರೆ ಬೇರೆ ಯಾರೂ ಅಲ್ಲ. ಕೆಳದಿಯ ರಾಣಿ ಚೆನ್ನಮ್ಮಾಜಿ. ಶತ್ರು ಪಾಳಯಕ್ಕೆ ಬೆಂಕಿಚಂಡಿನಂತಿದ್ದ, ವೀರಾಧಿವೀರರನ್ನೇ ಯುದ್ಧರಂಗದಲ್ಲಿ ಮಂಡಿ ಊರುವಂತೆ ಮಾಡಿದ, ಔರಂಗಜೇಬನಂಥ ಸುಲ್ತಾನನನ್ನೇ ಪತರಗುಟ್ಟುವಂತೆ ಮಾಡಿ ಪ್ರಾಣಭಿಕ್ಷೆ ನೀಡಿದ ವೀರವನಿತೆ ರಾಣಿ ಚೆನ್ನಮ್ಮಾಜಿ. ಆಕೆ ಕೇವಲ ಕೆಳದಿಯ ರಾಣಿ ಮಾತ್ರವಲ್ಲ. ಹದಿನೇಳನೇ ಶತಮಾನದಲ್ಲೇ ಶತ್ರು ಪಾಳಯಕ್ಕೆ ಸಿಂಹಸ್ವಪ್ನವಾಗಿದ್ದ ದೇಶದ ಸಾಕ್ಷಾತ್ ದುರ್ಗೆ.
ನಮಗೆ ಮೊದಲಿನಿಂದಲೂ ಕೆಳದಿ ಅಂದ್ರೆ ಅಚ್ಚುಮೆಚ್ಚು. ಅದೆಂಥದೋ ರೋಮಾಂಚನ. ನಮ್ಮ ಗುರುಗಳು ಕೆಳದಿ ಚೆನ್ನಮ್ಮನ ಕಥೆ ಹೇಳಿದಾಗಲೆಲ್ಲಾ ನಮ್ಮೊಳಗೂ ಅವಳ ಕೆಚ್ಚಿನ ಕಿಚ್ಚು, ಪರಾಕ್ರಮ ಆವರಿಸಿಕೊಳ್ಳುತ್ತಿತ್ತು. ಇತ್ತೀಚೆಗೆ ನಮಗ್ಯಾಕೋ ಕೆಳದಿ ಬಹುವಾಗಿ ಕಾಡತೊಡಗಿತು. ಹೋಗಲೇಬೇಕು, ಆ ವೀರವನಿತೆ ಮೆಟ್ಟಿದ ಉಸಿರಾಡಿದ ನೆಲವನ್ನ ಸ್ಪರ್ಶಿಸಿ ಬರಬೇಕು ಅನ್ನೋ ಹಂಬಲ ದಿನೇದಿನೇ ಹೆಚ್ಚಾಗತೊಡಗಿತು. ನಾವು, ಆನಂದಪುರದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ,ಚಿಕ್ಕಮಗಳೂರಿನ ಬಸವತತ್ತ್ವಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಮೂವರೂ ಕೆಳದಿಯಲ್ಲಿ ಬೀಡುಬಿಟ್ಟೆವು. ಆ ಸುಖವೇ ಬೇರೆ. ಆ ನೆಲದ ಅಣುಅಣುವಿನಲ್ಲೂ ರಾಣಿ ಚೆನ್ನಮ್ಮಾಜೀಯ ವೀರಪೌರುಷ ನಿಗಿ ನಿಗಿ ಅನ್ನುತ್ತಿದೆ. ಆಕೆ ನಡೆದಾಡಿದ, ಹೋರಾಡಿದ, ಶತ್ರುಗಳಿಗೆ ರಣಚೆಂಡಿಯಾಗಿ ರುಂಡಮುಂಡ ಚೆಂಡಾಡಿದ ಕಥೆಗಳನ್ನು ಡಾ. ವೆಂಕಟೇಶ್ ಜೋಯಿಷ್ ಹೇಳುತ್ತಿದ್ದರೆ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತಿದ್ದವು.
ಕೆಳದಿಯ ರಾಣಿ ಚೆನ್ನಮ್ಮಾಜಿ ಕ್ರಿಸ್ತಶಕ ೧೬೭೨ರಿಂದ ೧೬೯೭ರವರೆಗೆ ಅಂದ್ರೆ ಬರೋಬ್ಬರಿ ೨೫ ವರ್ಷ ಆರು ತಿಂಗಳು ಇಪ್ಪತ್ತು ದಿನಗಳ ಕಾಲ ಕೆಳದಿಯನ್ನು ಆಳುತ್ತಾಳೆ. ಆ ಕಾಲಕ್ಕೆ ಒಬ್ಬ ಹೆಣ್ಣು ಮಗಳು ೨೫ ವರ್ಷ ರಾಜ್ಯವನ್ನಾಳುತ್ತಾಳೆ ಅಂದ್ರೆ ಆಕೆಯಲ್ಲಿ ಎಂಥ ಪೌರುಷವಿತ್ತು, ಹಠ ಇತ್ತು, ರಾಜತಾಂತ್ರಿಕತೆ ಇತ್ತು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಕಿಚ್ಚಿತ್ತು ಅಂತ ಊಹಿಸಿಕೊಳ್ಳಿ. ಶತ್ರುಗಳು ಶತ ದಿಕ್ಕಗಳಿಂದ ಮುಗಿಬಿದ್ದಾಗಲೂ ಅವರನ್ನು ಸೋಲಿಸಿ ಇಕ್ಕೇರಿ ಸಂಸ್ಥಾನವನ್ನು ಸಂರಕ್ಷಿಸಿದ ರಣಚತುರೆ ಕೆಳದಿ ಚೆನ್ನಮ್ಮಾಜಿ.
ಕೆಳದಿಯ ರಾಣಿ ಚೆನ್ನಮ್ಮಾಜೀಯ ಬಗ್ಗೆ ತಿಳಿಯಬೇಕೆಂದರೆ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಮತ್ತು ಆ ಕಾಲಘಟ್ಟದ ಇತರೆ ಇತಿಹಾಸಕಾರರು ಬರೆದ ಗ್ರಂಥಗಳನ್ನು ಓದಬೇಕು. ಆಕೆಯ ತಂದೆ ಕೋಟಿಪುರ ಸಿದ್ದಪ್ಪ. ಸಿದ್ದಪ್ಪನವರು ಮಗಳಿಗೆ ಬಾಲ್ಯದಲ್ಲೇ ಶಸ್ತ್ರ ಶಾಸ್ತ್ರ ವಿದ್ಯೆ ಕೊಡಿಸಿದ್ದರು. ಮುಂದೆ ವಯಸ್ಸಿಗೆ ಬಂದಂತೆ ಚೆನ್ನಮ್ಮಾಜಿಯನ್ನು ಸೋಮಶೇಖರನಾಯಕನಿಗೆ ಕೊಟ್ಟು ಮದುವೆ ಮಾಡಲಾಗುತ್ತದೆ. ಈ ಸೋಮಶೇಖರ ನಾಯಕ ಶಿವಪ್ಪನಾಯಕನ ಪುತ್ರ. ಶಿವಪ್ಪ ನಾಯಕ ಸಾಮಾಜಿಕ ಹರಿಕಾರನೆಂದೇ ಹೇಳಬಹುದು. ಈತ ರೂಪಿಸಿದ ಕಂದಾಯ ವ್ಯವಸ್ಥೆ ಅತ್ತುತ್ತಮವಾದ ವ್ಯವಸ್ಥೆಯಾಗಿತ್ತು. ಆಗಿನ ಕಂದಾಯ ವ್ಯವಸ್ಥೆಗೆ ಸಿಸ್ತು ಅಂತಾನೆ ಹೆಸರಿತ್ತು. ಅದು ಎಷ್ಟು ಪ್ರಚಲಿತವಾಗಿತ್ತು ಎಂದ್ರೆ ಶಿವಪ್ಪ ಸಿಸ್ತು ಅಂತಾನೆ ಖ್ಯಾತಿ ಪಡೆದಿತ್ತು.
ಸೋಮಶೇಖರ ನಾಯಕ ಅತ್ಯಂತ ಧಾರ್ಮಿಕ ವ್ಯಕ್ತಿಯಾಗಿದ್ದ. ಹಲವು ವರ್ಷಗಳ ಕಾಲ ಮದುವೆ ಆಗದೇ ಉಳಿದಿದ್ದರೂ ಕೊನೆಗೆ ರೂಪವತಿಯೂ ಚತುರಮತಿಯೂ ಆದ ಚೆನ್ನಮ್ಮಾಜಿಯನ್ನು ಅತ್ಯಂತ ಇಷ್ಟಪಟ್ಟು ಮದುವೆಯಾಗುತ್ತಾನೆ. ಮದುವೆಯಾದ ಮೇಲೆ ಶಿವಪ್ಪನಾಯಕನಿಂದ ಚೆನ್ನಮ್ಮಾಜಿ ಆಡಳಿತದ ಅನುಭವವನ್ನು ಪಡೆದುಕೊಳ್ಳುತ್ತಾಳೆ. ಸೂಕ್ತ ಸಮಯದಲ್ಲಿ ಪತಿಗೆ ಸಲಹೆ ಸೂಚನೆಗಳನ್ನು ನೀಡತೊಡಗುತ್ತಾಳೆ.
ಇಲ್ಲಿ ಸೋಮಶೇಖರ ನಾಯಕನ ಚಂಚಲತೆ ಬಗ್ಗೆ ಒಂದಿಷ್ಟು ಹೇಳಲೇಬೇಕು. ಆತ ಲೋಲುಪನಾಗಿದ್ದ. ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದು ರಾಜ್ಯವನ್ನು ಕಡೆಗಣಿಸಿಬಿಟ್ಟ. ಸದಾ ವೇಶ್ಯೆಯ ಮನೆಯಲ್ಲಿ ಮೈಮರೆಯುತ್ತಿದ್ದ ಅವನಿಗೆ ಅರಿವಿಲ್ಲದಂತೆ ವಿಷಪ್ರಾಶನ ಮಾಡಿಸಲಾಗುತ್ತಿರುತ್ತದೆ. ಕ್ರಮೇಣ ಆತ ಹುಚ್ಚನಂತಾಗುತ್ತಾನೆ. ಇದು ರಾಣಿ ಚೆನ್ನಮ್ಮಾಜಿಗೆ ಚಿಂತೆಗೀಡಾಗುವಂತೆ ಮಾಡುತ್ತದೆ. ರಾಜನ ಮಾನಸಿಕ ಸ್ಥಿತಿ ಸರಿ ಇಲ್ಲ ಅಂತ ಸುತ್ತಮುತ್ತಲಿನ ರಾಜರಿಗೆ ಗೊತ್ತಾದರೆ ಗತಿ ಏನು ಅಂತ ಚಿಂತಿಸುತ್ತಾಳೆ. ಆಕೆ ಅಂದುಕೊಂಡಂತೆ ಬಿಜಾಪುರದ ಸುಲ್ತಾನನ ಕಣ್ಣು ಬಿದನೂರಿನ ಮೇಲೆ ಬೀಳುತ್ತದೆ. ಸರ್ವಸನ್ನದ್ಧನಾದ ಬಿಜಾಪುರದ ಸುಲ್ತಾನ ಬಿದನೂರಿಗೆ ಮುತ್ತಿಗೆ ಹಾಕುತ್ತಿದ್ದಂತೆ ಮಂತ್ರಿಗಳು, ಸೇನಾನಾಯಕರು ಮಗುವೊಂದನ್ನು ದತ್ತು ತೆಗೆದುಕೊಂಡು ರಾಜ್ಯಭಾರ ಮಾಡುವಂತೆ ಚೆನ್ನಮ್ಮಾಜಿಗೆ ಸೂಚಿಸುತ್ತಾರೆ.ಆದ್ರೆ ಮಕ್ಕಳಿಲ್ಲದ ಚೆನ್ನಮ್ಮಾಜಿಗೆ ಮಂತ್ರಿಗಳ ಸಲಹೆ ರುಚಿಸಲಿಲ್ಲ. ಆಕೆ ನೇರವಾಗಿ ಪತಿ ಸೋಮಶೇಖರನ ಬಳಿಗೆ ಹೋಗಿ ರಾಜ್ಯದ ಮೇಲೆ ಸುಲ್ತಾನರ ದಬ್ಬಾಳಿಕೆ ನಡೆಯುತ್ತಿದೆ. ಬಂದು ಕಾಪಾಡು ಅಂತ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದ್ರೆ ಸೋಮಶೇಖರ ನಿರಾಕರಿಸುತ್ತಾನೆ. ಇದ್ಯಾಕೋ ಕಷ್ಟಕಾಲವೆಂದರಿತ ಚೆನ್ನಮ್ಮಾಜಿ ಮಾತುಕತೆಗೆ ಬಂದ ಸುಲ್ತಾನಿಗೆ ಮೂರು ಲಕ್ಷಕೊಟ್ಟು ತಕ್ಷಣಕ್ಕೆ ಆಗಬಹುದಾಗಿದ್ದ ಯುದ್ಧವನ್ನು ನಿಲ್ಲಿಸುತ್ತಾಳೆ. ಆದ್ರೆ ಮಾತುಕತೆಗೆ ಬಂದ ಸುಲ್ತಾನನ ದೂತ ಹೋಗುವಾಗ ಸೋಮಶೇಖರನನ್ನು ಕೊಲ್ಲಿಸುತ್ತಾನೆ. ಬಿದನೂರಿನ ಮೇಲೆ ಮುತ್ತಿಗೆಯನ್ನೂ ಹಾಕುತ್ತಾನೆ. ಹೆದರದ ಚೆನ್ನಮ್ಮಾಜಿ ತನ್ನ ಹಿತೈಷಿಗಳಾದ ಗುರುಬಸಪ್ಪದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ,ತಿಮ್ಮರಸಯ್ಯರ ಸಹಾಯದಿಂದ ವೈರಿಗಳನ್ನು ಸದೆ ಬಡಿದು ಕೆಳದಿ ಸಂಸ್ಥಾನವನ್ನು ಉಳಿಸಿಕೊಳ್ಳುತ್ತಾಳೆ. ೨೭ ಫೆಬ್ರವರಿ ೧೬೭೨ರಲ್ಲಿ ಕವಲೇದುರ್ಗದಲ್ಲಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ.
ಇಲ್ಲಿ ಒಂದು ವಿಷಯವನ್ನು ನಾವು ಪ್ರಸ್ತಾಪಿಸಬೇಕು. ಚೆನ್ನಮ್ಮಾಜಿಯ ಕಾಲಕ್ಕೆ ಸತಿಸಹಗಮನ ಪದ್ಧತಿ ಉತ್ತುಂಗದಲ್ಲಿತ್ತು. ಅಂದ್ರೆ ಪತಿ ಸತ್ತರೆ ಸತಿಯೂ ಬೆಂಕಿಯಲ್ಲಿ ಬಿದ್ದು ಸಾಯಬೇಕು. ಆದ್ರೆ ಸೋಮಶೇಖರನ ಸಾವಿನಿಂದ ತಾನೂ ಚಿತೆ ಏರಬೇಕಾಗಿ ಬಂದಾಗ ಅದನ್ನು ಚೆನ್ನಮ್ಮಾಜಿ ವಿರೋಧಿಸುತ್ತಾಳೆ. ಐದು ಜನ ಅತ್ತೆಯರು ಈ ಹಿಂದೆ ಸಹಗಮನ ಮಾಡಿದ್ದರೂ ಅರಮನೆಯ ಒಳಗೆ ಮತ್ತು ರಾಜ್ಯದ ಹೊರಗೆ ಅಪಾರ ಒತ್ತಡವಿದ್ದರೂ ತಾನು ರಾಜ್ಯಾಡಳಿತವನ್ನು ನಿಭಾಯಿಸುತ್ತೇನೆ ಅಂತ ಸವಾಲು ಎಸೆಯುತ್ತಾಳೆ. ಆ ಕಾಲಕ್ಕೆ ಚೆನ್ನಮ್ಮಾಜಿಯ ಈ ವಿರೋಧ ಕ್ರಾಂತಿಕಾರಕ ತೀರ್ಮಾನವೇ ಸರಿ. ಹೇಳಬೇಕೆಂದ್ರೆ ಸತಿಸಹಗಮನ ಪದ್ಧತಿಯನ್ನು ವಿರೋಧಿಸಿದ್ದ ರಾಜಾರಾಮ್ ಮೋಹನರಾಯರಿಗಿಂತ ನೂರು ವರ್ಷ ಮೊದಲೇ ಸತಿಸಹಗಮನದ ವಿರುದ್ಧ ದನಿ ಎತ್ತಿದ ದಿಟ್ಟೆ ಕೆಳದಿ ರಾಣಿ ಚೆನ್ನಮ್ಮಾಜಿ.
ಕೆಳದಿ ರಾಣಿ ಚೆನ್ನಮ್ಮಾಜಿ ಎಂಥ ರಾಜಕೀಯ ಚತುರೆ ಅನ್ನೋದಕ್ಕೆ ನಿಮಗೊಂದು ಉದಾಹರಣೆ ಹೇಳಬೇಕು. ಹಿಂದೂ ಹೃದಯ ಸಾಮ್ರಾಟನೆನಿಸಿದ ಛತ್ರಪತಿ ಶಿವಾಜಿಯ ಮೊದಲ ಮಗ ಸಾಂಭಾಜಿ ಕೊಲೆಯಾಗಿರುತ್ತಾನೆ. ಎರಡನೇ ಮಗ ರಾಜಾರಾಮ. ಅವನನ್ನೂ ಕೊಂದು ಮರಾಠ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಔರಂಗಜೇಬ್ ಹವಣಿಸುತ್ತಿರುತ್ತಾನೆ. ಇದರಿಂದ ಹೆದರಿದ ರಾಜಾರಾಮ ಘೋರ್ಪಡೆ ಮಾಧವರಾಯರ ಆಣತಿಯ ಮೇರೆಗೆ ರಕ್ಷಣೆ ಕೋರಿ ಚೆನ್ನಮ್ಮಾಜಿಯ ಬಳಿಗೆ ಸನ್ಯಾಸಿ ವೇಷ ತೊಟ್ಟು ಬರುತ್ತಾನೆ. ಹಿಂದೂ ದೊರೆಗಳಾರೂ ರಾಜಾರಾಮನ ರಕ್ಷಣೆಗೆ ನಿಲ್ಲದಾದಾಗ ರಾಣಿ ಚೆನ್ನಮ್ಮಾಜಿ ನಾನು ನಿನ್ನನ್ನು ರಕ್ಷಿಸಿಸುತ್ತೇನೆ. ಕನ್ನಡಿಗರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎನ್ನುವುದನ್ನು ನೆನಪಿಟ್ಟುಕೊ ಎನ್ನುವ ವಚನ ನೀಡುತ್ತಾಳೆ.
ಇತ್ತ ಔರಂಗಜೇಬನ ಸೈನ್ಯ ಕೆಳದಿಯ ಗಡಿಗೆ ಬಂದು ನಿಲ್ಲುತ್ತದೆ. ಆದರೇನು ಕೆಳದಿಯ ಹೆಣ್ಣುಲಿ ರಾಣಿ ಚೆನ್ನಮ್ಮಾಜಿ ಕಿಂಚಿತ್ತೂ ಹೆದರಲ್ಲ. ಔರಂಗಜೇಬನ ಸೈನ್ಯವನ್ನು ಕುಟ್ಟಿ ಪುಡಿಮಾಡುತ್ತಾಳೆ. ಸೋತ ಔರಂಗಜೇಬ ಮತ್ತು ಆತನ ಮಗ ಮೊಹಮ್ಮದ್ ಅಜಮ್ ಶಾ ಇಬ್ಬರೂ ರಾಣಿ ಚೆನ್ನಮ್ಮನ ಸೆರೆಯಾಳಾಗುತ್ತಾರೆ. ಇಬ್ಬರೂ ರಾಣಿಯ ಮುಂದೆ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಾರೆ. ಚೆನ್ನಮ್ಮಾಜಿ ಮನಸ್ಸು ಮಾಡಿದ್ದರೇ ಅವರಿಬ್ಬರನ್ನೂ ಅಲ್ಲೇ ಕೊಂದು ಸೇಡುತೀರಿಸಿಕೊಳ್ಳಬಹುದಿತ್ತು. ವಾರಸುದಾರರಿಲ್ಲದ ಇಡೀ ಮೊಘಲ್ ಸಾಮ್ರಾಜ್ಯವನ್ನೇ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಕ್ಷಮಾಗುಣವುಳ್ಳ ಕೆಳದಿಯ ರಾಣಿ ಚೆನ್ನಮ್ಮ ಔರಂಗಜೇಬ ಮತ್ತು ಮಗ ಅಜಮ ಶಾ ರನ್ನು ಕ್ಷಮಿಸುತ್ತಾಳೆ. ಯಾಕೆಂದ್ರೆ ಒಬ್ಬ ಕನ್ನಡದ ತಾಯಿಗೆ ಜೀವ ಕೊಟ್ಟು ಗೊತ್ತೇ ವಿನಃ ಜೀವ ಪಡೆದು ಗೊತ್ತಿಲ್ಲ.
ಇಷ್ಟೆಲ್ಲಾ ನಡೆಯುವ ಮೊದಲೇ ರಾಜಾರಾಮನನ್ನು ಜಿಂಜಿಯ ಕೋಟೆಗೆ ಕಳುಹಿಸಿ ಅಲ್ಲಿ ರಾಜ್ಯಭಾರದ ವ್ಯವಸ್ಥೆ ಮಾಡಿರುತ್ತಾಳೆ ಕೆಳದಿಯ ರಾಣಿ ಚೆನ್ನಮ್ಮಾಜಿ. ಇದರ ಕೃತಾರ್ಥವಾಗಿಯೇ ರಾಜಾರಾಮನು ಕೆಳದಿಯ ಮೂರನೇ ರಾಜಧಾನಿ ಬಿದನೂರಿನಲ್ಲಿ ಪಾರ್ವತಿ ದೇವಸ್ಥಾನವನ್ನು ನಿರ್ಮಿಸುತ್ತಾನೆ.
ಕೆಳದಿಯ ರಾಣಿ ಚೆನ್ನಮ್ಮಾಜಿ ಕೇವಲ ಧೈರ್ಯವಂತೆ ಅಲ್ಲ. ಶೌರ್ಯವಂತೆಯೂ ಅಲ್ಲ. ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಜನಪರ ನಿಲುವು ಹೊಂದಿದ್ದಳು. ಬಸವಾದಿ ಶರಣರ ವಚನ ಸಾಹಿತ್ಯವನ್ನು ಪಠಿಸುತ್ತಾ, ಪ್ರತಿ ನಿತ್ಯ ಇಷ್ಟಲಿಂಗ ಧ್ಯಾನ ಮಾಡುತ್ತಾ ಅಪ್ರತಿಮ ದಿವ್ಯಶಕ್ತಿ ಹೊಂದಿದ್ದಳು. ದಾಸೋಹವೇ ದೇವಧಾಮ ಎಂದುಕೊಂಡಿದ್ದಳು. ಹಾಗಾಗಿಯೇ ಶೃಂಗೇರಿ ಮಠಕ್ಕೆ ರಾಜಾಶ್ರಯ, ಅಗ್ರಹಾರ ಮತ್ತು ಜಂಗಮ ಮಠಗಳ ನಿರ್ಮಾಣ, ಸುಮಾರು ಎರಡು ಲಕ್ಷ ಜಂಗಮರಿಗೆ ದಾಸೋಹ ವ್ಯವಸ್ಥೆ, ರಾಜ್ಯದಲ್ಲಿ ಕೆರೆಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಳು. ಶೃಂಗೇರಿಗೆ ಚಿನ್ನದ ಗೋಪಾಲ ಕೃಷ್ಣ ಮತ್ತು ಸ್ಪಟಿಕ ಲಿಂಗ, ಕೊಲ್ಲೂರು ಮೂಕಾಂಬಿಕೆಗೆ ಪಚ್ಚೆ ಪದಕ, ಹೊರನಾಡು ಅನ್ನಪೂರ್ಣೆಗೆ ಕುಂಕುಮ ಸೇವೆ ಅಲ್ಲದೆ ವಿಜಯ ದಶಮಿಯಂದು ವಿಶೇಷ ಪೂಜೆಗೆ ಪ್ರೋತ್ಸಾಹ ನೀಡಿದ್ದಳು. ಬಹಳ ಮುಖ್ಯವಾದ ವಿಷಯವೆಂದರೆ ದತ್ತುಪುತ್ರನ ಸಮ್ಮುಖದಲ್ಲಿ ರಾಜ್ಯಾಡಳಿತ ನಡೆಸಬೇಕು ಅನ್ನುವ ನಿಯಮವಿದ್ದರೂ ಅದನ್ನು ಧಿಕ್ಕರಿಸಿ ಆಡಳಿತದ ಚುಕ್ಕಾಣಿ ಹಿಡಿದು ನಂತರ ಬಸಪ್ಪನೆಂಬ ದತ್ತುಪುತ್ರನನ್ನ ಪಡೆದುಕೊಂಡವಳು ರಾಣಿ ಚೆನ್ನಮ್ಮಾಜಿ. ಬಸಪ್ಪನಿಗೆ ಅತ್ಯದ್ಭುತವಾದ ಶಿಕ್ಷಣ ಕೊಡಿಸಿದಳು. ಮುಂದೆ ಆತನೇ ಬಸಪ್ಪನಾಯಕನೆಂದೂ ಬಸವಭೂಪಾಲನೆಂದು ಖ್ಯಾತಿ ಪಡೆದ. ಆತ ಬರೆದ ಗ್ರಂಥವೇ ಶಿವತತ್ವ ರತ್ನಾಕರ. ಅದೇ ಬೃಹತ್ ಸಂಸ್ಕೃತ ವಿಶ್ವಕೋಶ ಎಂದು ಖ್ಯಾತಿ ಪಡೆದಿದೆ.
ಅಂದ್ರೆ ೩೫೦ ವರ್ಷಗಳ ಹಿಂದೆ ಕೆಳದಿ ಸಾಮ್ರಾಜ್ಯವನ್ನು ಆಳಿದ ಕನ್ನಡತಿ ಅತ್ಯಂತ ಪ್ರಖರವಾದ ತೇಜಸ್ಸನ್ನು ಹೊಂದಿದ್ದಳು. ರಾಷ್ಟ್ರಧರ್ಮಕ್ಕೆ, ಸ್ವರಾಜ್ಯದ ಹೋರಾಟಕ್ಕೆ ಆಕೆ ಅದ್ಭುತ ಉದಾಹರಣೆಯಾಗಿ ನಮ್ಮ ಮುಂದೆ ನಿಲ್ಲುತ್ತಾಳೆ. ಅಂದು ಆಕೆ ರಾಣಿಯಾಗುವ ದಿಟ್ಟ ನಿರ್ಧಾರ ಮಾಡದಿದ್ದರೆ, ಶತ್ರುಪಾಳಯವನ್ನು ಬಗ್ಗು ಬಡಿಯದಿದ್ದರೆ, ಅಷ್ಟು ಧೈರ್ಯ ಸ್ಥೈರ್ಯ ಪ್ರದರ್ಶಿಸದಿದ್ದರೆ ಬಹುಶಃ ಕೆಳದಿ ಸಾಮ್ರಾಜ್ಯ ಸುಲ್ತಾನರ ಪಾಲಾಗುತ್ತಿತ್ತೇನೋ! ಆದರೆ ಎಲ್ಲವನ್ನೂ ಮೆಟ್ಟಿನಿಂತು ನಾಡಿನ ಕೀರ್ತಿ ಪತಾಕೆ ಹಾರಿಸಿ ಅಜರಾಮರವಾದವಳು ಕೆಳದಿಯ ರಾಣಿ ಚೆನ್ನಮ್ಮಾಜಿ.
ಈ ವರ್ಷ ರಾಣಿ ಚೆನ್ನಮ್ಮಾಜಿಯ ೩೫೦ನೇ ಪಟ್ಟಾಭಿಷೇಕ ವರ್ಷ.
ಆಕೆ ನಮಗೆಲ್ಲಾ ಸ್ಪೂರ್ತಿ. ದೇಶಕ್ಕೆ ಕೀರ್ತಿ ಎಂದು ಹೇಳಲು ನಮಗೆ ತುಂಬ ಹೆಮ್ಮೆ ಎನಿಸುತ್ತದೆ.
ಸರ್ಕಾರಕ್ಕೆ ಮನವಿ
೧. ಕೆಳದಿ ಮತ್ತು ಸಾಗರದ ಮಧ್ಯೆ ಒಂದು ಅಧ್ಯಯನ ಪೀಠ ಆಗಬೇಕು ಅದು ಕುವೆಂಪು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು.
೨. ಪ್ರತಿವರ್ಷ ಫೆಬ್ರವರಿ ೨೭ನೇ ತಾರೀಖು ರಾಜ್ಯಾದ್ಯಂತ ಕೆಳದಿ ರಾಣಿ ಚೆನ್ನಮ್ಮಾಜಿ ಜಯಂತಿ ಆಚರಿಸಬೇಕು.
೩. ಕೆಳದಿ ಮತ್ತು ಮಹಾರಾಷ್ಟ್ರ ಸಂಬಂಧಪಟ್ಟ ಹಾಗೆ ಮರಾಠಿ ಮೋಡಿ ಲಿಪಿಯ ಬಗ್ಗೆ ಅದ್ಯಯನಕ್ಕೆ ಕ್ರಮ ಕೈಗೊಳ್ಳಬೇಕು.
೪. ಕೆಳದಿ ರಾಣಿ ಚೆನ್ನಮ್ಮಾಜಿಯ ಹೆಸರು ಶಿವಮೊಗ್ಗ ಏರ್ಪೋರ್ಟ್ಗೆ ಇಡಬೇಕು.
೫.ಕೆಳದಿ ಮತ್ತು ಕಾಶಿ ಸಂಬಂಧ ಕುರಿತು ಕಾಶಿಯಲ್ಲಿ ಒಂದು ಸ್ಮಾರಕ ನಿರ್ಮಾಣವಾಗಬೇಕು.
ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ
ಹರಕ್ಷೇತ್ರ ಹರಿಹರ.
ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋತ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಯಿತು.
ದಿನಾಂಕ 03-02-2022ರಂದು ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋತ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಯಿತು.
ನಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿಗಳ ಮೀಸಲಾತಿ ಹೋರಾಟ, ರಾಜ್ಯದ ಪ್ರಸ್ತುತ ಬೆಳವಣಿಗೆಗಳು ಹಾಗೂ ಹರಕ್ಷೇತ್ರ ಹರಿಹರದಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮ ಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿರುವ ಇವರು, ದೇಶದ ಮೀಸಲಾತಿ ವ್ಯವಸ್ಥೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಇದೇ ವೇಳೆ ಸನ್ಮಾನ್ಯ ರಾಜ್ಯಪಾಲರು ಯೋಗಾಭ್ಯಾಸದ ಬಗ್ಗೆ ಹಲವಾರು ಮಾಹಿತಿಗಳನ್ನು ನಮ್ಮಿಂದ ಪಡೆದುಕೊಂಡರು. ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ರಾಜ್ಯಪಾಲರನ್ನು ನಮ್ಮ ಹರಕ್ಷೇತ್ರ ಕ್ಕೆ ಭೇಟಿ ನೀಡುವಂತೆ ಮನವಿ ಸಲ್ಲಿಸಲಾಯಿತು.
ಹರಿಹರ ದಲ್ಲಿ ನಡೆಯುತ್ತಿರುವ ತುಂಗಾ ಆರತಿ ಯೋಜನೆ ಯ ಬಗ್ಗೆ ರಾಜ್ಯಪಾಲರು ಮಾಹಿತಿಯನ್ನು ಪಡೆದುಕೊಂಡರು. ಆತ್ಮೀಯ ಸ್ವಾಗತ ನೀಡಿ ಹೃದಯಪೂರ್ವಕವಾಗಿ ಆದರಿಸಿ ನಮ್ಮ ಮಾತುಗಳಿಗೆ ಕಿವಿಯಾದ ರಾಜ್ಯಪಾಲರಿಗೆ ಧನ್ಯವಾದಗಳು
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.
I had the honour of meeting and interacting with His Excellency, Governor of Karnataka state, Sri Thawar Chand Gehlot Ji at his residence-Raj Bhavan,Bangaluru.
We spoke at length about the current affairs of our state and especially our struggle of obtaining reservation for the Panchamsaali community which I have been leading from the front.
We also spoke in detail about the relentless developmental work we have undertaken in Harihara and rest of Karnataka through our Veerashaiva Lingayata Panchamsaali Peetha, Harihara.
I must admit, he is one of the finest statesman I have ever seen. Humble yet clear with his vision.
We the people of Karnataka are fortunate to have him look over us. We wish him the best in all his endeavours. May he be blessed with the Krupa of Mahadeva.
Jagadguru Sri Sri Sri Vachananand Mahaswamiji
Veerashaiva Lingayat Panchamsali Jagadguru Peetha, Harakshetra Harihar.
ವಚನಾನಂದ ಶ್ರೀ ಗಳಿಗೆ ಉಪರಾಷ್ಟ್ರಪತಿ ಗಳಿಂದ ಸಂಸತ್ ಭವನಕ್ಕೆ ಬರುವಂತೆ ಆಹ್ವಾನ
ವಚನಾನಂದ ಶ್ರೀ ಗಳಿಗೆ ಉಪರಾಷ್ಟ್ರಪತಿ ಗಳಿಂದ ಸಂಸತ್ ಭವನಕ್ಕೆ ಬರುವಂತೆ ಆಹ್ವಾನ ಪೋನ್ ಮಾಡಿ ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಸಂಸತ್ ಭವನಕ್ಕೆ ಬರುವಂತೆ ಆಹ್ವಾನಿಸಿದ ಉಪರಾಷ್ಟ್ರಪತಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಜಗದ್ಗುರು ಪೀಠ ವಚನಾನಂದ ಶ್ರೀ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಸ್ವಾಮೀಜಿಗಳ ಯೋಗಸಾಧನೆ ಹಾಗೂ ಜಗದ್ಗುರುಪೀಠ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು.
ಆಜಾದಿ ಅಮೃತ್ ಮಹೋತ್ಸವ ಹಿನ್ನೆಲೆ ಪಂಚಮಸಾಲಿ ಸಮಾಜದ ಕೊಡುಗೆ ಬಗ್ಗೆ ಶ್ರೀ ಗಳಿಂದ ಮಾಹಿತಿ ಪಡೆದ ಉಪರಾಷ್ಟ್ರಪತಿ.
ಹರಜಾತ್ರೆ ಮುಂದೂಡಲು ನಾಯ್ಡು ಸಲಹೆ
ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆಯಲಿದ್ದ ಹರಜಾತ್ರೆ ಮುಂದೂಡಲು ಸಲಹೆ ನೀಡಿದ ಉಪರಾಷ್ಟ್ರಪತಿ.
ಹೆಚ್ಚು ಜನ ಸೇರುವುದರಿಂದ. ತೊಂದರೆ ಆಗುವ ಸಾದ್ಯತೆ ಇದೆ. ಓಮಿಕ್ರಾನ್ ಭೀತಿ ಕಡಿಮೆ ಆಗುವ ವರೆಗೆ ಹರಜಾತ್ರೆ ಮುಂದೂಡಲು ಶ್ರೀಗಳಿಗೆ ನಾಯ್ಡು ಸಲಹೆ.
ಹರಿಹರಕ್ಕೆ ಬರಲಿರುವ ವೆಂಕಯ್ಯ ನಾಯ್ಡು
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ಶ್ರೀ ಗಳಿಗೆ ಹೇಳಿದ ನಾಯ್ಡು.
ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ವಚನಾನಂದ ಶ್ರೀಗಳಿಂದ ಮಾಹಿತಿ ಪಡೆದ ವೆಂಕಯ್ಯ ನಾಯ್ಡು.
ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ.
ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ,ತೆಲಂಗಾಣ,ಆಂದ್ರಪ್ರದೇಶ,ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿದ್ದಾರೆ ಎಂದು ಉಪರಾಷ್ಟ್ರ ಪತಿಗಳಿಗೆ ಮಾಹಿತಿ ನೀಡಿದ ವಚನಾನಂದ ಶ್ರೀ.
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿದ ನಿಗದಿತ ಸಮಯಕ್ಕೆ ಹರ ಜಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಗಳಿಗೆ ಹೇಳಿದ ಉಪರಾಷ್ಟ್ರಪತಿ.
ಇದೇ ತಿಂಗಳ 14 ಮತ್ತು 15 ರಂದು ಹರಿಹರದ ಹರಕ್ಷೇತ್ರ ಪಂಚಮಸಾಲಿ ಜಗದ್ಗುರು ಪೀಠ ನಡೆಯಲಿದ್ದ ಹರಜಾತ್ರೆ.
ಹರಜಾತ್ರೆ ಗೆ ಆಹ್ವಾನ ನೀಡಿ ಪತ್ರ ತಲುಪಿದ ಹಿನ್ನೆಲೆ ವಚನಾನಂದ ಶ್ರೀಗಳಿಗೆ ಪೋನ್ ಕರೆ ಮಾತನಾಡಿ ಉಪರಾಷ್ಟ್ರಪತಿ.
ಜ.14, 15 ರಂದು ಆಯೋಜಿಸಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ
ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜ. 14, 15 ರಂದು ಆಯೋಜಿಸಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ
ಹರಿಹರ ಗುರುಪೀಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಹಾಗೂ ದೇಶದಲ್ಲಿ ಓಮಿಕ್ರಾನ್ ಭೀತಿ ಜತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಾವಳಿ ಪಾಲನೆ ಹಾಗೂ ಜನತೆಯ ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನವನ್ನು ಇಂದು ಗುರುಪೀಠದಲ್ಲಿ ನಡೆದ ಸಮುದಾಯದ ಮುಖಂಡ ಸಭೆ ಕೈಗೊಂಡಿದೆ ಎಂದು ತಿಳಿಸಿದರು.
ಹರಿಹರ ಪೀಠದ ನಮ್ಮ ಹರಕ್ಷೇತ್ರದಲ್ಲಿ ಹರಜಾತ್ರೆ ಆಯೋಜಿಸುತ್ತಾ ಬರಲಾಗಿದೆ. ಆದರೆ ಓಮಿಕ್ರಾನ್ ಭೀತಿ ಹೆಚ್ಚಿದೆ, ಸರಕಾರ ಕೂಡ ಹಲವು ನಿಯಮಾವಳಿ ರೂಪಿಸಿ ನಿಬರ್ಂಧ ಹೇರಿದೆ. ನಮ್ಮ ಪೀಠ ಸರಕಾರದ ಜತೆ ಮತ್ತು ಜನರ ಜತೆ ಇರಲಿದೆ. ಹಾಗಾಗಿ ತಾತ್ಕಾಲಿಕ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿನ ಹಾವಳಿ ಕಡಿಮೆಯಾದ ನಂತರ ಮುಂದಿನ ಹರಜಾತ್ರೆಯ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಾತ್ರೆ ಎಂದರೆ ನೂರಾರು ವರ್ಷಗಳ ಇತಿಹಾಸವಿರುವ ಮಠಗಳಲ್ಲಿ ನಡೆಯುವ ತೇರು, ರಥೋತ್ಸವದ ಮಾದರಿ ನಮ್ಮ ಹರಜಾತ್ರೆಯಲ್ಲಿ ಇರುವುದಿಲ್ಲ.ಭಕ್ತರು, ಸಮುದಾಯವನ್ನು ಒಗ್ಗೂಡಿಸಲು ಜಾತ್ರೆ ಪದವನ್ನು ಮಾತ್ರೆ ತೆಗೆದುಕೊಂಡಿದ್ದೇವೆ. ಸಮಕಾಲೀನ ವಿಷಯಗಳ ಚರ್ಚೆ ಹರಜಾತ್ರೆಯಲ್ಲಿ ನಡೆಯಲಿದೆ. ಈ ಬಾರಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ನೀಡುವವರು ಮತ್ತು ಪಡೆಯುವವರ ಸೇರಿ ಉದ್ಯೋಗ ಮೇಳ ಹೀಗೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಹರಮಾಲೆ ಸಂಕಲ್ಪ ಸಮರ್ಪಣೆ
ಹರಜಾತ್ರೆ ಹಿನ್ನೆಲೆ ಹರಮಾಲೆ ಅಯೋಜಿಸಲಾಗಿತ್ತು, ಹಲವಾರು ಜನ 21 ದಿನದ ಹಿಂದೆ ಹರಮಾಲೆ ಧರಿಸಿದ್ದರು. ಜ. 14 ರಂದು ಇಲ್ಲಿಗೆ ಆಗಮಿಸುವ ಮಾಲಾಧಾರಿಗಳು ‘ಹರಮಾಲೆ ಸಂಕಲ್ಪ ಸಮರ್ಪಣೆ’ ಮಾಡಲಾಗುತ್ತಿತ್ತು. ಜಾತ್ರೆ ಮುಂದೂಡಿರುವುದರಿಂದ ಮಾಲಾಧಾರಿಗಳು ಅವರವರ ಮನೆಯಲ್ಲಿಯೇ ಹರಮಾಲೆ ಸಂಕಲ್ಪ ಸಮರ್ಪಣೆ ಮಾಡಬೇಕು. ಇನ್ಮುಂದೆ ರುದ್ರಾಕ್ಷಿ ಮಾಲೆ ತೊಟ್ಟು ಪ್ರತಿದಿನ ಹರಮಂತ್ರ ಪಠಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಹರಜಾತ್ರೆ ಆಹ್ವಾನ ಪತ್ರಿಕೆ ನೋಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಳಿ ಮಠ, ಪಂಚಮಸಾಲಿ ಸಮಾಜ ಹಾಗೂ ನಮ್ಮ ಯೋಗದ ಬಗ್ಗೆ ಮಾಹಿತಿ ಪಡೆದು ಕರೆ ಮಾಡಿದ್ದರು. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಂಸತ್ ಭವನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ನಾವು ಅವರಿಗೆ ನಮ್ಮ ಸಮಾಜದ ಬೆಳವಡಿ ರಾಣಿ ಮಲ್ಲಮ್ಮ ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ,ದಂಡಿ ಸತ್ಯಾಗ್ರಹದಲ್ಲಿ ಮಹಾತ್ಮಾಗಾಂಧೀಜಿ ಜತೆಯಲ್ಲಿದ್ದ ನಮ್ಮ ಮೈಲಾರ ಮಹಾದೇವ ಇವರೆಲ್ಲಾ ಪಂಚಮಸಾಲಿ ಸಮಾಜದವರು, ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಾವು ಮಾಹಿತಿ ನೀಡಿದೆ. ಹರಜಾತ್ರೆ ಮುಂದೂಡಲು ಅವರು ಸಲಹೆ ನೀಡಿದರು, ಮುಂದಿನ ಜಾತ್ರೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ನಾಗನಗೌಡ್ರು,ಪಿ ಡಿ ಶಿರೂರ, ಚಂದ್ರಶೇಖರ ಪೂಜಾರ,ಸೋಮನಗೌಡ ಪಾಟೀಲ,ಮಹೇಶ ಹಾವೇರಿ,ಪ್ರಕಾಶ್ ಪಾಟೀಲ,ಬಸವನಗೌಡ್ರು ತೊಂಡಿಹಾಳ, ಶ್ರೀಮತಿ ವಸಂತಾ ಹುಲ್ಲತ್ತಿ,ಸುನಂದಮ್ಮ,ಗೀತಮ್ಮ ಇತರರು ಇದ್ದರು.